ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಶೀನಪ್ಪ ಭಂಡಾರಿಗಳ ಮೇಳ - ಹಳ್ಳಿಗಳ ಸಾಂಸ್ಕೃತಿಕ ಉಸಿರು

ಲೇಖಕರು :
ನಾ.ಕಾರ೦ತ, ಪೆರಾಜೆ
ಸೋಮವಾರ, ಜುಲೈ 29 , 2013

ಪುತ್ತೂರು ಶೀನಪ್ಪ ಭಂಡಾರಿ (ಶೀನಪ್ಪಣ್ಣ, ಶೀನಣ್ಣ) ಇನ್ನಿಲ್ಲ. ಜೂನ್‌ 24ರಂದು ವಿಧಿವಶ. ಅರ್ಧ ಶತಮಾನಕ್ಕೂ ಮಿಕ್ಕಿ ಸದ್ದಿಲ್ಲದೆ ಕರಾವಳಿಯುದ್ದಕ್ಕೂ ಯಕ್ಷಗಾನ ಮೇಳವನ್ನು ಒಯ್ದಿದ್ದಾರೆ. ಸಾರಿಗೆಯ ತೊಂದರೆಯಿಂದಾಗಿ ದೊಡ್ಡ ಮೇಳ ಗಳು ಹೋಗಲಾಗದ ಸ್ಥಳಗಳಲ್ಲಿ ಟೆಂಟ್‌ ಊರಿದ್ದಾರೆ. ಇವರ ಮೇಳದ ಸರಕು ಸಾಗಾಟಕ್ಕೆ ಎತ್ತಿನ ಗಾಡಿ ಹೋಗುವಷ್ಟು ದಾರಿ ಸಾಕು. ಹೀಗಾಗಿ ನಗರಕ್ಕಿಂತಲೂ ಹಳ್ಳಿಯ ಜನ ಸುಬ್ರಹ್ಮಣ್ಯ ಮೇಳವನ್ನು ಒಪ್ಪಿ , ಅಪ್ಪಿಕೊಂಡಿದ್ದರು.

ಸಾರಿಗೆ ಬಂತು. ವ್ಯವಸ್ಥೆಗಳು ದಾಂಗುಡಿಯಿಟ್ಟವು. ಮೇಳಗಳ ಸಂಖ್ಯೆ ಬೆಳೆದುವು. ವೈವಿಧ್ಯ ಪ್ರಸಂಗ ಗಳು ಪ್ರದರ್ಶಿತಗೊಂಡುವು. ರಂಗುರಂಗಿನ ವೇಷ ಭೂಷಣಗಳು, ರಂಗವೇದಿಕೆಗಳು ಪ್ರೇಕ್ಷಕರನ್ನು ಹಿಡಿದಿಟ್ಟವು. ಇವುಗಳ ಮಧ್ಯೆ ಭಂಡಾರಿಗಳ ಮೇಳ ಯಾವ ಪ್ರಚಾರ ರಂಪಾಟಕ್ಕೂ ಸಿಕ್ಕದೆ ಹಳ್ಳಿಯ ಪ್ರೇಕ್ಷಕರನ್ನು ನಂಬಿತು. ಕಿಸೆ ತುಂಬಿ ತುಳುಕದಿದ್ದರೂ, ಎಂದೂ ಖಾಲಿಯಾದುದಿಲ್ಲ; ಅರೆಹೊಟ್ಟೆಯಲ್ಲಿ ನಿದ್ರಿಸಲಿಲ್ಲ, ಮನೆಮಂದಿ ಉಪವಾಸ ಕೂರಲಿಲ್ಲ ಎನ್ನುವುದು ಗಮನಾರ್ಹ.

ಶೀನಣ್ಣ ತುಳು ಪ್ರಸಂಗಗಳ ಮೂಲಕ ಹಳ್ಳಿಯ ಮನಸ್ಸು ಗೆದ್ದಿದ್ದರು. ಹಿತಮಿತವಾದ ವೇಷಭೂಷಣವಿದ್ದರೂ ಪ್ರೇಕ್ಷಕರಿಗೆ ಗೊಂದಲವಾಗದಂತೆ ಸರಿದೂಗಿಸುವ ಜಾಣ್ಮೆ ಮೇಳ ಕಲಿಸಿದ ಅನುಭವ. ಪ್ರೇಕ್ಷಕರಿಗೆ ನಿರಾಶೆ ಮಾಡದೆ ಬೆಳಗ್ಗಿನವರೆಗೆ ಆಟ "ರೈಸು'ವಂತೆ ಮಾಡುವಲ್ಲಿ ಪರಿಣತ!

ಆಟಕ್ಕೆ ಜನ ಕಡಿಮೆಯಾಗಿ ವೆಚ್ಚಕ್ಕೆ ಹಣ ಸಾಕಾಗದ ಸಂದರ್ಭಗಳಲ್ಲಿ ಹಳ್ಳಿಯ ಅಭಿಮಾನಿಗಳು ಆಧರಿಸಿ, ಹಣ ಸಂಗ್ರಹಿಸಿ ಕೈಗಿತ್ತುದನ್ನು ನೆನಪಿಸಿಕೊಳ್ಳುತ್ತಿದ್ದರು. ಚೌಕಿಯೊಳಗೆ ಇಣುಕಿದರೆ ಐದೋ ಹತ್ತೋ ಮಂದಿ ಕಲಾವಿದರು. ಬೆಳಗ್ಗಿ ನವರೆಗೆ ದೇವೀ ಮಹಾತ್ಮೆ ಪ್ರಸಂಗವನ್ನು ನಿರ್ವಹಿಸುವಷ್ಟು ಅನುಭವಿಗಳು. ಶೀನಪ್ಪಣ್ಣನ ಗರಡಿಯಲ್ಲಿ ಪಳಗಿದ ಚಾಣಾಕ್ಷ ರಿವರು. ಒಂದು ರಾತ್ರಿ ಮೂರೋ ನಾಲ್ಕೋ ವೇಷವನ್ನು ನಿರ್ವಹಿಸುವಷ್ಟು ಗಟ್ಟಿಗರು.

ಶ್ರೀ ಸುಬ್ರಹ್ಮಣ್ಯ ಮೇಳವು ಕಲಾವಿದರನ್ನು ಸೃಷ್ಟಿಸುವ ಕಾರ್ಖಾನೆ. ಇಲ್ಲಿ ಗೆಜ್ಜೆ ಕಟ್ಟಿ ಕುಣಿಯದ ಕಲಾವಿದರು ವಿರಳ. ಒಂದೆರಡು ವರುಷ ವ್ಯವಸಾಯ ಮಾಡಿದರೆ ಕಷ್ಟ- ಸುಖ ಗಳ ಆರ್ಜನೆಯಾಗುತ್ತಿತ್ತು. ರಂಗಮಾಹಿತಿಗಳು ಕರಗತವಾಗು ತ್ತಿದ್ದವು. ತೆಂಕಿನ ಬಹುತೇಕ ಮೇಳಗಳಲ್ಲಿ ಭಂಡಾರಿಗಳ ಗರಡಿ ಯಲ್ಲಿ ಪಳಗಿದ ಕಲಾವಿದರು ಒಬ್ಬಿಬ್ಬರಾದರೂ ಸಿಗುತ್ತಾರೆ.

ಮೇಳದ ಬದುಕು ಹೂವಿನ ಹಾಸಿಗೆ ಕೊಟ್ಟಿಲ್ಲ, ಆದರೆ ಮುಳ್ಳಿನಲ್ಲಿ ನಡೆದಿಲ್ಲ. ಕಾಂಚಾಣ ಸದ್ದು ಮಾಡಿಲ್ಲ , ಆದರೆ ಬದುಕು ನಲುಗಲಿಲ್ಲ. ಕೊನೆಯವರೆಗೂ ಯಕ್ಷಗಾನದ್ದೇ ಮಂತ್ರ. ರಂಗದಲ್ಲಿ ಕೌರವನಾಗಿ, ಹಿರಣ್ಯಾಕ್ಷನಾಗಿ ಮೆರೆದ ಭಂಡಾರಿಗಳಿಗೆ ಪುರಾಣ ಪಾತ್ರಗಳ ಸೂಕ್ಷ್ಮಾತಿಸೂಕ್ಷ್ಮಗಳ ಅರಿವಿತ್ತು. ಮೇಳ ಮುನ್ನಡೆಸುವ, ಕಲಾವಿದರನ್ನು ಪೋಷಿಸುವ ದೃಷ್ಟಿಯಿಂದ ತುಳು ಪ್ರಸಂಗಗಳನ್ನು ನೆಚ್ಚಿಕೊಳ್ಳಬೇಕಾಯಿತು.

ಶೀನಪ್ಪಣ್ಣ ರಾಜ್ಯ ಪ್ರಶಸ್ತಿ ಪುರಸ್ಕೃತರು. ಸರಕಾರಿ ವಲಯದಲ್ಲಿ ಯಕ್ಷಗಾನದ ಹೆಸರು ಬಂದಾಗಲೆಲ್ಲಾ ವರಿಷ್ಠರಿಗೆ ಭಂಡಾರಿಗಳು ಪರಿಚಿತರು. ಬಹಳ ಆಪ್ತ ಸಂಬಂಧವಿತ್ತು. ಅಷ್ಟೇ ಅಂತರವನ್ನು ಕಾಪಾಡಿಕೊಂಡಿದ್ದರು. ಸರಕಾರಿ ಆಯೋಜಿತ ಯಕ್ಷಗಾನ ಪ್ರದರ್ಶನಗಳನ್ನು ನಿರುಮ್ಮಳವಾಗಿ ನಡೆಸಿಕೊಡುತ್ತಿದ್ದರು. ಕಚೇರಿಗಳ ಕೆಂಪುಪಟ್ಟಿ ವ್ಯವಸ್ಥೆಯ ಹತ್ತಿರದ ಪರಿಚಯವಿತ್ತು.

ನಯ ವಿನಯ ಮಾತು ಗಳು ಜನ್ಮದತ್ತ. ವ್ಯವಹಾರ ಕುಶಲಿ. ಅರ್ಧ ಶತಮಾನಕ್ಕೂ ಮಿಕ್ಕಿದ ಯಕ್ಷಬದುಕಿನ ಯಶದ ಕಾರಣವಿದು. ಮೇಳದ ಪ್ರದರ್ಶನಗಳಲ್ಲಿ, ವ್ಯವಸ್ಥೆಗಳಲ್ಲಿ ವ್ಯತ್ಯಾಸ ಬಂದಾಗ ಪ್ರೇಕ್ಷಕರು ಶೀನಪ್ಪಣ್ಣನ ಬೆನ್ನ ಹಿಂದೆ ಇರುತ್ತಿದ್ದರು. ಒಮ್ಮೆ ಅವರ ಸ್ನೇಹ ತೆಕ್ಕೆಗೆ ಸಿಕ್ಕರೆ ಸಾಕು, ಮತ್ತೆಂದು ಬಿಡದಷ್ಟು ಆಪ್ತತೆ.

ಪುತ್ತೂರು ಶ್ರೀಧರ ಭಂಡಾರಿ
ಆಜಾನುಬಾಹು ದೇಹ, ಧರಿಸಿದ ಶುಚಿಯಾದ ಉಡುಪು, ಹಣೆಯ ತಿಲಕ, ಹೊಳಪು ಕಂಗಳುಗಳಿಗೆ ಸೆಳೆಮಿಂಚಿನ ತಾಕತ್ತು. ಕಲಾವಿದರ ವರ್ತನೆ, ಅಭಿವ್ಯಕ್ತಿಗಳು ದಾರಿ ತಪ್ಪಿದಾಗ ತಿಳಿಹೇಳುವ ಹಿರಿಯಜ್ಜ. ಮಾತು ಕೇಳದಿದ್ದರೆ ಮನಸ್ಸಿನಲ್ಲಿ ಕೊರೆಯುವ ತಾತ. ಮಾತಿಗೆ ತೊಡಗಿದರೆ ಮನದ ಮೌನ ಮಾತಾಗುತ್ತಿತ್ತು. ಅಲ್ಲಿ ಅಸಹಾಯಕತೆ, ಚಡಪಡಿಕೆಗಳಿರುತ್ತಿತ್ತು. ವಿಷಾದವಿರುತ್ತಿರಲಿಲ್ಲ.

ತಮ್ಮ ಮಕ್ಕಳಿಗೆಲ್ಲಾ ಯಕ್ಷಗಾನವನ್ನು ಬಾಲ್ಯದಲ್ಲೇ ಅಂಟಿಸಿದ್ದರು. ಅವರಲ್ಲೊಬ್ಬರಾದ ಪುತ್ತೂರು ಶ್ರೀಧರ ಭಂಡಾರಿಯವರು ತೆಂಕುತಿಟ್ಟು ರಂಗದ ಸಿಡಿಲಮರಿ! ಮೇಳದ ತಿರುಗಾಟ ನಿರ್ವಹಣೆಗಿಂತಲೂ ಮಗ ಶ್ರೀಧರ ರನ್ನು ಯಕ್ಷಗಾನದಲ್ಲಿ ಬೆಳೆಸಿರುವುದು ಯಕ್ಷಗಾನಕ್ಕೆ ಶೀನಣ್ಣರ ದೊಡ್ಡ ಕೊಡುಗೆ. ದೊಡ್ಡ ಮೇಳದ ಕಲಾವಿದ ಎಂದು ಮಗನನ್ನು, ಯಜಮಾನ (ತಂದೆಯ) ಮೇಳ ಎಂಬ ಭಾವ ಸಂಚಾರಗಳನ್ನು ಅವರಿಬ್ಬರ ಸಂಭಾಷಣೆಯಲ್ಲಿ ನೋಡಿದ್ದೇನೆ.

ಶೀನಪ್ಪಣ್ಣ ಈಗಿಲ್ಲ. ಅವರ ಮೇಳದ ಪ್ರಚಾರದ ಜವಾಬ್ದಾರಿ ಹೊತ್ತ ಅಂಬು ಶೆಟ್ರೂ ಇಲ್ಲ. ಅಂದು ವಾಲ್‌ ಪೋಸ್ಟ್‌ ಅಂಟಿಸುತ್ತಿದ್ದ ಗೋಡೆಗಳೆಲ್ಲಾ ನುಣುಪಾಗಿ ಮಿರಿಮಿರಿಯಾಗಿವೆ. ಅಲ್ಲಿ ಮೊಬೈಲ್‌ ಕಂಪೆನಿಗಳ ವಾಲ್‌ಪೋಸ್ಟ್‌ ರಾರಾಜಿಸುತ್ತಿವೆ. ಒಂದೆಡೆ ಕಾಲದ ಓಟದ ಅನುಭವ. ಮತ್ತೂಂದೆಡೆ ಕಳೆದು ಹೋದ ಸಾಂಸ್ಕೃತಿಕ ದಿನಗಳು. ಬದುಕಿನ ದ್ವಂದ್ವಗಳಿವು.

ಇವರ ಯಕ್ಷ ಬದುಕಿನ ಅನುಭವವನ್ನು ಯಕ್ಷ ಭಂಡಾರಿ ಕೃತಿಯಲ್ಲಿ ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಪೋಣಿಸಿದ್ದಾರೆ. ಶೀನಪ್ಪಣ್ಣನ ಕಲಾ ಸಾಕ್ಷಿಗೆ ಇದೊಂದೇ ದಾಖಲೆ ಈಗ ಉಳಿದಿರುವುದು. ಯಕ್ಷಗಾನವನ್ನು ಪ್ರೀತಿಸುವ ಎಲ್ಲರ ಮನದಲ್ಲೂ ಸಾಕ್ಷಿಯಾಗಿ ಶೀನಪ್ಪಣ್ಣ ಸ್ಥಾಯಿ ಯಾಗಿದ್ದಾರೆ. ಅಗಲಿದ ಹಿರಿಯ ಚೇತನಕ್ಕೆ ಅಕ್ಷರ ನಮನ.



ಕೃಪೆ : www.udayavani.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ